ರಾಣೆಬೇನ್ನೂರು: ಪ್ರವಾದಿ ಮುಹಮ್ಮದ್ ಪೈಗಂಬರ್ ಹಾಗೂ ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರ ಮೂಲದ ರಾಮಗಿರಿ ಮಹಾರಾಜ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಾವಿರಾರು ಮುಸ್ಲಿಂ ಸಮುದಾಯದ ಜನರು ನಗರದಲ್ಲಿ ಮೌನ ಮೆರವಣಿಗೆ ಮೂಲಕ ಪ್ರತಿಭಟನೆ ನಡೆಸಿದರು.
ನಗರದ ಆಂಗ್ಲೋ ಉರ್ದು ಮೈದಾನದಿಂದ ಪ್ರಾರಂಭವಾದ ಪ್ರತಿಭಟನೆ ಮೆಡ್ಲೇರಿ ರಸ್ತೆ, ಪಿ.ಬಿ.ರಸ್ತೆ ಮಾರ್ಗವಾಗಿ ತಹಸೀಲ್ದಾರ ಕಚೇರಿಗೆ ತೆರಳಿತು.
ನಂತರ ಮಾತನಾಡಿದ ಮುಸ್ಲಿಂ ಸಮಾಜದ ಅಲ್ತಾಪ್ ಹಿಮಾಮಿ ನಾಡಿನ ಮಹಾಕವಿಯಾದ ಕುವೆಂಪು ಅವರು ಸರ್ವಜನಾಂಗದ ಶಾಂತಿಯ ತೋಟ ಎಂದು ನಮ್ಮ ರಾಜ್ಯ ನಮ್ಮ ದೇಶದ ಬಗ್ಗೆ ಹಾಡಿ ಹೊಗಳಿದ್ದಾರೆ. ಆದರೆ ಸಮಾಜದಲ್ಲಿ ಶಾಂತಿ ಕದಡುವ ಸಲುವಾಗಿ ಕೆಲವರು ಮುಂದಾಗಿದ್ದಾರೆ. ದೇಶದಲ್ಲಿ ಒಂದು ಧರ್ಮ ಇನ್ನೊಂದು ಧರ್ಮಕ್ಕೆ ನಿಂದಿಸುವುದಾಗಲಿ ಅಥವಾ ಅವಹೇಳನಕಾರಿ ಹೇಳಿಕೆ ನೀಡುವುದನ್ನು ಸಹಿಸುವುದಿಲ್ಲ.
ಅದರಂತೆ ಮಹಾರಾಷ್ಟ್ರ ಮೂಲದ ಮುಂಬ್ರಾ ಗ್ರಾಮದ ರಾಮಗಿರಿ ಮಹಾರಾಜ ಅವರು ಧಾರ್ಮಿಕ ಸಭೆಯಲ್ಲಿ ಮಹಮ್ಮದ್ ಪೈಗಂಬರ್ ಹಾಗೂ ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಭಾಷಣ ಮಾಡುವ ಮೂಲಕ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಅಂತವರ ಮೇಲೆ ಕೇಂದ್ರ ಹಾಗೂ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿ ಮೂಲಕ ಆಗ್ರಹ ಮಾಡಿದರು.
ಅಂಜುಮನ್ ಸಂಸ್ಥೆ ಅಧ್ಯಕ್ಷರಾದ ಏಜಾಜ್ ಖಾಬ ಸೌದಾಗರ ಮಾತನಾಡಿ, ದೇಶದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ನಿರಂತರವಾಗಿ ಅವಹೇಳನಕಾರಿ ಹೇಳಿಕೆ, ದೌರ್ಜನ್ಯ ಕಂಡು ಬರುತ್ತಿದ್ದ ಅವುಗಳನ್ನು ತಡೆಯಲು ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ಮಹಮ್ಮದ್ ಪೈಗಂಬರ್ ಅವರು ಬಗ್ಗೆ ಇಂತಹ ನೀಚ ಹೇಳಿಕೆ ನೀಡಿದರು ಅವರ ಮೇಲೆ ಯಾವುದೇ ಕಾನೂನು ಕ್ರಮವನ್ನು ಈವರೆಗೂ ಜರುಗಿಸಿಲ್ಲ. ಕೂಡಲೇ ಅವರ ಮೇಲೆ ಕಾನೂನು ಕ್ರಮ ಕೈಗೊಂಡು ಕಠಿಣ ಶಿಕ್ಷೆ ನೀಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಗ್ರೇಡ್-1 ತಹಸೀಲ್ದಾರ ಅರುಣಕುಮಾರ ಕಾರಗಿ ಮೂಲಕ ರಾಷ್ಟ್ರಪತಿ ದ್ರೌಪದಿ ಮುರ್ಮಾ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ಸಮಯದಲ್ಲಿ ಅಂಜುಮನ್ ಸಂಸ್ಥೆಯ ಇಮ್ರಾನಖಾನ್ ಶಿರೇದ್, ರಫಿಕ್ ಮೆಣಸಿನಕಾಯಿ, ರಿಯಾಜ್ ಅಹ್ಮದ್ ಕುಪ್ಪೆಲೂರು,ಹುಸೇನಸಾಬ ಬಿದರಿ, ನೂರುಲ್ಲಾ ಖಾಜಿ, ಹಬೀಬವುಲ್ಲಾ ಕಂಬಳಿ, ಖಾಲಿದ್ ಬಾಶಾ ಭಾವಿಕಟ್ಟಿ, ನಜುರುಲ್ಲಾ ಕಿಲ್ಲೇದಾರ, ಭಾಷಾಸಾಬ್ ನೀಲಗಾರ ,ಅತಾವುಲ್ಲ ಉದಗಟ್ಟಿ ಸೇರಿದಂತೆ ಎಸ್ಡಿಪಿಐ ಪಕ್ಷದ ಮುಖಂಡರು ಹಾಜರಿದ್ದರು.
More Stories
ತಾಪಂ ಕೆಡಿಪಿ ಸಭೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗೆ ತರಾಟೆ..!
ಹೆದ್ದಾರಿಯಲ್ಲಿ ದರೋಡೆ ಮಾಡಲು ಹೊಂಚು ಹಾಕಿದ್ದವರು ಕಂಬಿ ಹಿಂದೆ
ನಗರಸಭೆ ನೀರಿನ ತೆರಿಗೆಯನ್ನು ನಿಮ್ಮ ಮೊಬೈಲನಲ್ಲಿ ಪಾವತಿಸಿ.